ಏಕಾಂಬರ
|ಈ ಕಾದಂಬರಿ ಎನ್ನಲಾಗದ ಪುಸ್ತಕಕ್ಕೆ ಇತರ ಯಾವುದೇ ಲೇಖಕರ ಮುನ್ನುಡಿ ಇಲ್ಲ. ಸ್ವತಃ ಲೇಖಕರೇ, ಅಸಡ್ಡೆಯಿಂದಲೇನೋ ಎಂಬಂತೆ, ಇನ್ಯಾವುದೋ ಕಾದಂಬರಿಯ ತಾಲೀಮಿಗೆಂದು ಬರೆದ ಕಥೆ ಇದು ಎಂದು ಹೇಳಿ, ನಿಮಗಿಷ್ಟವಾಗದಿದ್ದಲ್ಲಿ ನನ್ನ ಹೊಣೆ ಅಲ್ಲ ಎಂಬಂತೆ ಕೈತೊಳೆದುಕೊಂಡಂತಿದೆ. ಇದು ಕುಂ ವೀರಭದ್ರಪ್ಪ ವಿರಚಿತ, ‘ಏಕಾಂಬರ’ ಎಂಬ ಕಿರು ಕಾದಂಬರಿಯ ಕಿರು ಪರಿಚಯ.
ಒಂದು ಸಣ್ಣ ಊರಿನ ಬ್ಯಾಂಕ್ ಮ್ಯಾನೇಜರ್ ಎಷ್ಟೋ ವರ್ಷಗಳ ಕಾಲ, ಒಂದೇ ಅಂಗಿಯಲ್ಲಿ ಸವೆಸಿರುತ್ತಾನೆ. ಅದೇನೋ ಒಂದೊಮ್ಮೆ ಆತ ಹೊಸ ಅಂಗಿ ಹೊಲಿಸಲು ನಿರ್ಧಾರ ಮಾಡಿದನೆಂಬ ಸುದ್ದಿ ಊರಿನಲ್ಲಿ ವಿಚಿತ್ರ ಸಂಚಲನ ಉಂಟುಮಾಡುತ್ತದೆ. ಇದು ಏಕಾಂಬರ ಕಥೆಯ ಅತಿ ಚಿಕ್ಕ ಟಿಪ್ಪಣಿ. ಸ್ವಾರಸ್ಯಕರವಾಗಿ ತೋರಿಯೇ ಪುಸ್ತಕವನ್ನು ಖರೀದಿಸಿ ಓದಲು ಶುರು ಹಚ್ಚಿಕೊಂಡಿದ್ದು. ಕುಂ ವೀರಭದ್ರಪ್ಪ ಅವರ ಮುಂಚಿನ ಕೆಲ ಕಥೆಗಳನ್ನು ಓದಿ, ಅವರ ತಿಳಿಹಾಸ್ಯ ಲೇಪಿತ ಬರಹ ಶೈಲಿ ಓದಿ ಮೆಚ್ಚಿಕೊಂಡಿದ್ದವನು, ಈ ಪುಸ್ತಕದ ಬಗ್ಗೆ ಇಟ್ಟುಕೊಂಡಿದ್ದ ನಿರೀಕ್ಷೆ ಜಾಸ್ತಿಯಾಗಿತ್ತೇನೋ.
ಸಿಹಿ ತಿಂಡಿ ತಿನ್ನಲು ಜನರಿಗೆ ಇಷ್ಟವೆಂದು, ಕಲ್ಲುಸಕ್ಕರೆಯೇ ಶ್ರೇಷ್ಠ ಸಿಹಿತಿಂಡಿ ಎನ್ನಲಾಗುತ್ತದೆ? ಏಕಾಂಬರ ಪುಸ್ತಕ ಒಂದು ತರಹದ ಕಲ್ಲುಸಕ್ಕರೆ. ಕೃತಿಯಲ್ಲಿ ತಿಳಿಯಾಗಿ ಹಾಸ್ಯ ಬೆರೆಯುವ ಬದಲು, ಅತಿಯಾದ ಅವ್ಯವಹಾರಿಕ, ಅಪ್ರಸ್ತುತ, ತರ್ಕಹೀನ ಹಾಸ್ಯಗಳು ಕೃತಿಯ ಮಧ್ಯೆ ಅನಗತ್ಯವಾಗಿ ತುರುಕಿಕೊಂಡಿವೆ ಅನಿಸತೊಡಗುತ್ತದೆ. ಉದ್ದುದ್ದ ಅನರ್ಥಕಾರಿ ಕೊನೆಯಿಲ್ಲದ ವಾಕ್ಯಗಳು, ಪ್ರಯಾಸಪಟ್ಟು ತುರುಕಿರುವ ಪೋಲಿ ಪ್ರಯತ್ನಗಳು ಕೃತಿಯ ರಸವನ್ನು ಕೆಡಿಸಿಬಿಟ್ಟಿವೆ. ಕೆಟ್ಟ ಕನ್ನಡದ ಟಿವಿ ಚಾನೆಲ್ಗಳಲ್ಲಿ ಬರುವ ಕೆಳದರ್ಜೆಯ ಕಾಮಿಡಿ ಶೋಗಳ ಸಾಲುಗಳಲ್ಲೇ ಈ ಪುಸ್ತಕದ ಹಾಸ್ಯ ಕೂಡ ಸಾಗುತ್ತಿದೆಯೇನೋ ಅನ್ನಿಸುತ್ತದೆ. ಕೃತಿಯ ಮಧ್ಯೆ ಬರುವ ಹಾಸ್ಯಕ್ಕೂ, ಕೃತಿಯೇ ಅಪಹಾಸ್ಯದ ಥರ ತೋರುವುದಕ್ಕೂ ಬಹಳ ವ್ಯತ್ಯಾಸವಿರುತ್ತದೆ. ಇಲ್ಲಿರುವುದು ಬರಿ ಅಪಹಾಸ್ಯಗಳಂಥ, ನಿಜಕ್ಕೆ ದೂರವಾದಂಥ ಬಾಲಿಶ ಕಲ್ಪನೆಗಳು.
ಮೊದಲ 5೦% ಪುಸ್ತಕ ಹೇಗೋ ಓದಿಸಿಕೊಂಡು ಹೋದರು ಕೂಡ, ಅತಿಯಾದ ವಿನೋದ ಕಥೆಯ ದಾರಿ ತಪ್ಪಿಸಿ ರೇಗಿಸುತ್ತವೆ. ಪ್ಯಾರಾಗ್ರಾಫ್ ಗಳಷ್ಟು ಉದ್ದದ ಸಾರಹೀನ ವಾಕ್ಯಗಳು, ಓದನ್ನು ಮತ್ತಷ್ಟು ಅಸಹನೀಯಗೊಳಿಸುತ್ತವೆ. ಲೇಖಕರು ಯಾವುದೋ ಪೂರ್ವಗ್ರಹವಿಟ್ಟುಕೊಂಡು, ಯಾರನ್ನೋ ಗೇಲಿ ಮಾಡುತ್ತಾ, ಯಾವುದೋ ತುಂಬಾ ಅಗ್ಗದ ರೂಪಕಗಳನ್ನು ಸೃಷ್ಟಿಸುತ್ತಿದ್ದರೇನೋ ಅನ್ನಿಸತೊಡಗುತ್ತದೆ. ಗುಣಸಾಗರವೆಂಬ ಅರೆ ನಗರದ, ಜನ ಸಾಮಾನ್ಯರ ಕಥೆ, ವ್ಯಥೆಗಳು ಮೋಜು ಕೊಟ್ಟರೂ, ಅತಿಬಾಲಿಶವೆನಿಸುವ ರಾಜಕೀಯ ವಿಚಾರಗಳು ರುಚಿ ಕೆಡಿಸುತ್ತವೆ. ಎಲ್ಲಕಿಂತ ಮುಖ್ಯವಾಗಿ ಏಕಾಂಬರ ಎಂದು ಹೆಸರಿಟ್ಟು, ವ್ಯಕ್ತಿ ಕಥನಕ್ಕಿಂತ ಊರಿನ ಕಥನವೇ ಹೆಚ್ಚಾಗಿ ತೋರಿ, ಗುಣಸಾಗರ ಎಂಬ ಹೆಸರೇ ಕೃತಿಗೆ ಸೂಕ್ತವಾಗಿತ್ತೇನೊ ಅನಿಸುತ್ತದೆ. ಕಥೆ ಮೂಲ ಆಶಯದಿಂದ ಮತ್ತಷ್ಟು ಜಾರಿ ಇನ್ನೆಲ್ಲೋ ಅನವಶ್ಯಕವಾದ ಪಾತ್ರದ ಸುತ್ತ ಕೇಂದ್ರೀಕೃತಗೊಳ್ಳುತ್ತದೆ. ಅತ್ತ ಮುಂದೂ ಅಲ್ಲ, ಇತ್ತ ಹಿಂದೂ ಅಲ್ಲವೆಂಬಂತೆ ತನ್ನದೇ ಗತಿಯಲ್ಲಿ ಸಾಗುತ್ತಿದ್ದ ಊರು ಹೇಗೆ ಹೊಸ ಹೊಸ ರೂಪಗಳನ್ನು ತಳೆದು ಒದ್ದಾಡಿತು ಎಂಬುದನ್ನ ಏಕಾಂಬರ ಎನ್ನುವ ಹೆಸರಿನ ಮೂಲಕ ರೂಪಿಸುವ ಪ್ರಯತ್ನ ಪಟ್ಟಿದ್ದಾರೋ ಗೊತ್ತಿಲ್ಲ. ಪ್ರಯತ್ನ ಅಷ್ಟೊಂದು ಸಫಲವಾದಂತೆ ಮಾತ್ರ ತೋರುತ್ತಿಲ್ಲ.
ಓದಲು ಸಮಯ ವ್ಯರ್ಥಪಡಿಸಿದ ಕಾರಣಕ್ಕಾದರೂ, ಕಥೆಗೆ ತಮ್ಮದೇ ಅರ್ಥ ಕಲ್ಪಿಸಿಕೊಳ್ಳುವ, ಆ ಮೂಲಕ ಸಾರ್ಥಕತೆ ಅನುಭವಿಸುವ ಜವಾಬ್ದಾರಿ ಓದುಗರಿಗೆ ಬಿಟ್ಟಿದ್ದು. ಕೊನೆಯಲ್ಲಿ ನಮ್ಮ ನೆಚ್ಚಿನ ಹಳೆಯ ಕುಂ ವೀ ಎಲ್ಲೋ ಕಳೆದು ಹೋದ ಭಾಸವಾಗುತ್ತದೆ. ಒಟ್ಟಿನಲ್ಲಿ ಹೇಳುವುದಾದರೆ ಈ ಪುಸ್ತಕದಿಂದ ನಿರೀಕ್ಷಿಸಿದ್ದು ಒಂದು ಆದರೆ ಸಿಕ್ಕಿದ್ದೊಂದು ಎಂದೇ ಹೇಳಬಹುದು. ಲೇಖಕರ ಹಳೆ ಕೃತಿಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಇದನ್ನು ಓದ ಹೊರಟಿರೋ ಜೋಕೆ.