ವೀರ ಚಂದ್ರಹಾಸ ಮತ್ತು ವಿದ್ಯಾರ್ಥಿ ಭವನದ ದೋಸೆ
|ಯಕ್ಷಗಾನವೆಂಬುದು ಒಂದು ಅನುಭವ. ಅಬ್ಬರವಲ್ಲ.
ಯಕ್ಷಗಾನದಂತಹ ಪ್ರಾಂತ್ಯೀಯ ಕಲೆಗಳಿಗೆ ಜೀವ ನೀಡುವುದು ಅವುಗಳ ಸಾತ್ವಿಕ, ಮೂಲಭೂತ ಶೈಲಿ.
ಜಾನಪದ ಎಂಬುದು ಯಾವತ್ತೂ , ಆ ಕಲೆಯು ಪ್ರಚಲಿತವಾಗಿರುವ ಪ್ರದೇಶದ ಜನರ ಸಾಂಸ್ಕೃತಿಕ ರುಚಿಯ ಪ್ರತಿಬಿಂಬವಾಗಿರುತ್ತದೆ.
ಪ್ರಾದೇಶಿಕ ಕಲೆಯನ್ನು ಪ್ರಚಾರಪಡಿಸುವ ಉದ್ದೇಶವೆಂದು ಸಾರಿ, ಅದರ ಮೂಲ ರೂಪವನ್ನು ಕೆಡಿಸಿ, ಅರಿಯದ ಪ್ರೇಕ್ಷಕರಿಗೆ ಬೇರೇನನ್ನೋ ತೋರಿಸಿ ದಿಕ್ಕು ತಪ್ಪಿಸುವ ಪ್ರಯತ್ನ ವೀರ ಚಂದ್ರಹಾಸದಲ್ಲಿ ನಡೆದಿದೆಯೇ ಎಂಬ ಅನುಮಾನ ಚಿತ್ರ ವೀಕ್ಷಿಸಿದಾಗ ಮೂಡಿದ್ದು ಸುಳ್ಳಲ್ಲ.
ಸದ್ಯ ಕನ್ನಡ ಚಿತ್ರರಂಗದಲ್ಲಿ ಪ್ರಚಲಿತವಾಗಿರುವ, ಒಂದು ರೀತಿಯ ಕಡ್ಡಾಯ ಆಚರಣೆಯಂತೆ, ವಿಘ್ನಹರ ವಿನಾಯಕನ ಬದಲಾಗಿ ಪುನೀತ್ ರಾಜಕುಮಾರ್ ಅವರಿಗೆ ನಮನ ಸಲ್ಲಿಸುವ ಆಚರಣೆ, ವೀರ ಚಂದ್ರಹಾಸದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಪುನೀತ್ ಯಕ್ಷಗಾನ ವೇಷದಲ್ಲಿ ಕಾಣಿಸುವ ಗ್ರಾಫಿಕ್ಸ್ ಮೂಲಕ ವ್ಯಕ್ತವಾಗುತ್ತದೆ.
ಗಣಪತಿ ವಿಘ್ನವನ್ನು ಮಾತ್ರ ನಿವಾರಿಸಬಹುದು ಆದರೆ ಅಪ್ಪುವಿನ ಉಲ್ಲೇಖ ಮೊದಲಲ್ಲಿ ಮಾಡಿದರೆ ಅಭಿಮಾನಿ ಸಾಗರವನ್ನು ತನ್ನದಾಗಿಸಿಕೊಳ್ಳಬಹುದು ಎಂಬ ಭ್ರಮೆ ಇಡೀ ಕನ್ನಡ ಚಿತ್ರರಂಗದಲ್ಲಿ ಆವರಿಸಿದಂತಿದೆ.
ಅಭಿಮಾನ ಒಂದು ನಿರ್ದಿಷ್ಟ ದೂರದ ತನಕ ಮಾತ್ರ ಕೃತಿಯನ್ನು ಕರೆದೊಯ್ಯಬಲ್ಲದು. ಕಲೆ, ಸ್ವಂತಿಕೆ, ಸೃಜನಶೀಲತೆ ಮಾತ್ರ ಚಿತ್ರರಂಗವನ್ನು ನಿಜವಾದ ಎತ್ತರಕ್ಕೆ ಏರಿಸುತ್ತದೆ. ಈ ಸರಳ ಸೂತ್ರವನ್ನು ಕನ್ನಡ ಚಿತ್ರರಂಗದವರು ಅರ್ಥಮಾಡಿಕೊಳ್ಳುವ ದಿನ ಶೀಘ್ರವೇ ಬರುತ್ತದೆ ಎಂದು ನಿರೀಕ್ಷಿಸಲು ಮಾತ್ರ ಹುಲು ಪ್ರೇಕ್ಷಕನಿಗೆ ಸಾಧ್ಯ.
ಪ್ರಸಕ್ತ ಕಾಲದ ಚಿತ್ರ ನಿರ್ಮಾಣದ ನೀಲನಕ್ಷೆಯಾದ ಬಾಹುಬಲಿ ಮತ್ತು ಕೆಜಿಫ್ ಚಿತ್ರಗಳನ್ನೇ ಮಾದರಿಯಾಗಿರಿಸಿ ಇಲ್ಲಿ ಯಕ್ಷಗಾನವನ್ನು ತುರುಕಲು ಯತ್ನಿಸಲಾಗಿದೆ. ಬಹುಶಃ ಅದೇ ಕಾರಣಕ್ಕಾಗಿ ಚಿತ್ರದ ಮೊದಲಲ್ಲೇ ರಾಜಮೌಳಿಯವರಿಗೆ, ಪ್ರಶಾಂತ್ ನೀಲ್ ಅವರಿಗೆ ಕೃತಜ್ಞತೆ ಸಲ್ಲಿಸಲಾಗಿದೆ. ಬಾಹುಬಲಿಯಾಗಲಿ, ಕೆಜಿಫ್ ಆಗಲಿ, ಮುಂಗಾರು ಮಳೆಯಾಗಲಿ ಗೆದ್ದಿರುವುದು ಅವುಗಳು ಪ್ರದರ್ಶನಗೊಂಡ ಕಾಲಕ್ಕೆ ಜಡ್ಡು ಹಿಡಿದು ಹೋಗಿದ್ದ ಚಲನಚಿತ್ರ ಕ್ಷೇತ್ರದಲ್ಲಿ ತಂದ ಹೊಸತನದಿಂದ. ಹಳೇ ಸೂತ್ರವನ್ನು ಮತ್ತೆ ಮತ್ತೆ ಕಲಸಿ ತಯಾರಿಸಿದ ಉತ್ಪನ್ನದಿಂದ ಹಳಸಿದ ವಾಸನೆ ಮಾತ್ರ ಬರಲು ಸಾಧ್ಯ.
ಇಡೀ ಚಿತ್ರವನ್ನು ಯಕ್ಷಗಾನದ ದೃಷ್ಟಿಕೋನದಿಂದ ನೋಡಿದಾಗ ತೋರುವ ಮೂಲ ಕೊರತೆ ಶೈಲಿಯದ್ದು. ಯಕ್ಷಗಾನದ ನಿಜವಾದ ರಸ ಅಡಗಿರುವುದು ಕಥೆ, ಭಾಗವತಿಕೆ, ಚಂಡೆ, ಮುಖ್ಯ ಪಾತ್ರಗಳ ಗಡಸು ಗಂಭೀರವಾದ ತಾತ್ತ್ವಿಕವಾದ ಸಂಭಾಷಣೆಗಳು, ಸಿಟ್ಟು-ಸಂತೋಷ-ಯುದ್ಧ-ಪ್ರಣಯಗಳೆಲ್ಲವನ್ನು ತನ್ನದೇ ಶೈಲಿಯ ಭಾಗವತಿಕೆ ಹಾಗೂ ಕುಣಿತದ ಮೂಲಕ ಕಾವ್ಯಾತ್ಮಕವಾಗಿ ವ್ಯಕ್ತಪಡಿಸುವ ರೀತಿಗಳಲ್ಲಿ.
ಇಡೀ ವೀರ ಚಂದ್ರಹಾಸ ಚಿತ್ರದಲ್ಲಿ ಪಾತ್ರಗಳು ಕುಣಿಯುವುದು ಅತೀ ವಿರಳ. ಎರಡು ಪ್ರೌಢ ಪಾತ್ರಗಳ ನಡುವೆ ಆಳವಾದ, ತೀವ್ರವಾದ ಅರ್ಥ ಮಥಿಸುವ ದೀರ್ಫ ಸಂಭಾಷಣೆಗಳಿಲ್ಲ.
ಯಕ್ಷಗಾನವೆಂಬುದು ಬರಿ ಚಂಡೆಯ ಅಬ್ಬರಕ್ಕೆ, ಕಣ್ಣು ಕುಕ್ಕುವ ವೈಭವದ ವೇಷಕ್ಕೆ ಸೀಮಿತವಾದಂತಿದೆ. ಕರಾವಳಿಯೇತರ ಪ್ರಾಂತ್ಯಗಳು ಯಕ್ಷಗಾನವನ್ನು ಯಾವ ಕೆಲವು ನಿರ್ದಿಷ್ಟ ವಿಷಯ, ವಿಚಾರಗಳಿಗೆ ಸೀಮಿತಗೊಳಿಸಿದ್ದಾವೋ ಅದನ್ನೇ ಈ ಚಿತ್ರ ಧೃಢೀಕರಿಸುವಂತಿದೆ. ಆ ತಪ್ಪು ದೃಷ್ಟಿಕೋನವನ್ನು ತಿದ್ದಿ, ಕಲೆಯನ್ನು ಮೂಲರೂಪಕ್ಕೆ ಹೆಚ್ಚು ಚ್ಯುತಿ ಬರದಂತೆ ಇತರರಿಗೆ ಪರಿಚಯಿಸುವ ಜವಾಬ್ದಾರಿ ಚಿತ್ರತಂಡದ್ದಾಗಬೇಕಿತ್ತು.
ಹಾಸ್ಯ ಸನ್ನಿವೇಶಗಳ ಸಂದರ್ಭದಲ್ಲಿ ಯಾವುದೇ ಕಾರಣವಿಲ್ಲದೆ ಒಂದು ಸಮುದಾಯವನ್ನು ತುಚ್ಛವಾಗಿ ಚಿತ್ರಿಸುವ ಪ್ರಯತ್ನ ಸ್ಪಷ್ಟವಾಗಿ ಕಂಡುಬರುತ್ತದೆ. ಇದರಿಂದ ನಿರ್ದೇಶಕ ತನಗೆ ಆ ವರ್ಗದ ಬಗ್ಗೆ ಇರುವ ಕೀಳು ಭಾವನೆಯನ್ನು ಸಾರ್ವಜನಿಕರ ಮುಂದೆ ಬಹಿರಂಗಪಡಿಸಿದಂತಾಗಿದೆ. ಆದರೆ ಇಲ್ಲಿ ಅರಿಯಬೇಕಾಗಿರುವ ವಿಷಯವೆಂದರೆ ಒಂದು ವರ್ಗವನ್ನು ಗೇಲಿ ಮಾಡುವ ಮೂಲಕ ಅದನ್ನು ಹಿಮ್ಮೆಟ್ಟುವುದು ಅಸಾಧ್ಯ. ಅಂಥ ಯಾವುದೇ ಪ್ರಯತ್ನಗಳು ಕೈಲಾಗದವನ ಗೊಣಗುವಿಕೆಯಷ್ಟೇ. ಹಿಮ್ಮೆಟ್ಟಬೇಕಿರುವದು ಆ ವರ್ಗ ತಮ್ಮನ್ನು ತುಳಿದ ವಿಷಯದಲ್ಲಿ ಸಾಧಿಸಿ ತೋರಿಸುವ ಮೂಲಕವಾಗಬೇಕೇ ಹೊರತು ಅಗ್ಗವಾದ ಅಪಹಾಸ್ಯಗಳ ಮೂಲಕವಲ್ಲ.
ಹಾಗೆಂದು ಚಿತ್ರ ಸಂಪೂರ್ಣವಾಗಿ ವಿಫಲವೆಂದಲ್ಲ. ದುಷ್ಟ ಬುದ್ಧಿ ಹಾಗೂ ಮದನನ ಪಾತ್ರ ಅಭಿನಯಿಸಿರುವ ಪ್ರಸನ್ನ ಶೆಟ್ಟಿಗಾರ್ ಹಾಗೂ ಉದಯ್ ಹೆಗ್ಡೆ ಕಡಬಾಳರು ಚಿತ್ರಕ್ಕೆ ನ್ಯಾಯ ಒದಗಿಸಲು ಪ್ರಯತ್ನಿಸಿದ್ದಾರೆ. ದುಷ್ಟಬುದ್ಧಿಯ ಸಿಂಹ ಗಾಂಭೀರ್ಯಭರಿತ ಅಭಿನಯ, ಯಕ್ಷಗಾನ ಗಂಡುಕಲೆ ಎಂಬುದನ್ನು ನೆನಪಿಸುವಂತಿದೆ. ಆದರೆ ಮುಖ್ಯಪಾತ್ರ, ಚಂದ್ರಹಾಸನ ಪಾತ್ರ ನಿರ್ವಹಣೆ ಮಾತ್ರ ಪೆಚ್ಚು ಪೆಚ್ಚು.
ರಾಗಿ ಮುದ್ದೆ ಹಾಗೂ ಕಡುಬನ್ನು ಮಿಶ್ರಮಾಡಿ ಹೊಸ ರುಚಿಯೆಂದು ಜನರಿಗೆ ತಿನ್ನಿಸುವ ಪ್ರಯತ್ನವನ್ನೇನೋ ಮಾಡಬಹುದು. ಆದರೆ ಮೊದಲ ತುತ್ತಿಗೇ ತಿಂದವನು ಮುಖ ಕಿವುಚುವುದಂತೂ ಖಂಡಿತಾ. ಹಾಗೆಯೇ ಇದೆ ಈ ಚಿತ್ರದಲ್ಲಿ ಮೊದಲ ಬಾರಿಗೆ ಯಕ್ಷಗಾನ ವೇಷ ಧರಿಸಿರುವ ಶಿವಣ್ಣನವರ ಅಭಿನಯ.
ಇಡೀ ಚಿತ್ರಕ್ಕೆ ದೃಷ್ಟಿ ಬೊಟ್ಟಿಟ್ಟಂತೆ ಕೊನೆಯಲ್ಲಿ ಬರುವ ಕಿರಿಚಾಡುವ ‘ವಿಶೇಷ ಅತಿಥಿ‘ ಪಾತ್ರಗಳು, ಯಕ್ಷಗಾನ ಎಂಬ ಕಲೆ ಎಲ್ಲರ ಕೈಗೆ ಸಿಗುವ ಸ್ವತ್ತಲ್ಲ ಎಂಬುದನ್ನು ಸಮರ್ಥಿಸುತ್ತವೆ.
ಬಾಡಿಗೆಗೆ ದೊರೆತ ವೇಷಭೂಷಣಗಳನ್ನು ಧರಿಸಿ, ವಾರ್ಷಿಕೋತ್ಸವದ ಪ್ರಯುಕ್ತ 2 ವಾರ ತಾಲೀಮು ನಡೆಸಿ, ಗುರುಗಳನ್ನು ಹತಾಶೆಗೊಳಿಸಿ, ರಂಗಸ್ಥಳವನ್ನು ಕಡೆಗೂ ಏರಿಯೇ ಬಿಟ್ಟ ಬಾಲಕರಂತೆ ತೋರುತ್ತವೆ ಇಲ್ಲಿ ಬರುವ ಹೆಚ್ಚಿನ ಪಾತ್ರಗಳು.
ಪಕ್ಕದ ಬೀದಿಯಲ್ಲೇ ಸಿಗುವ ಮಸಾಲೆ ದೋಸೆ ತನ್ನ ಶೋಕಿಗೆ ಸಾಲದೇ, ಕಿಲೋಮೀಟರುಗಟ್ಟಲೆ ದೂರ, ಟ್ರಾಫಿಕ್ ಮಧ್ಯೆ ಒದ್ದಾಡಿ, ಕುಳಿತುಕೊಂಡು ತಿನ್ನಲು ಇನ್ನೆರಡು ಗಂಟೆ ಕಾದು, ಒಂದರ ಮೇಲೆ ಒಂದಿಟ್ಟು ದೋಸೆ ತಟ್ಟೆಗಳನ್ನು ತರುವ ಸಪ್ಲೈಯರನನ್ನು ಅಚ್ಚರಿಯಿಂದ ನೋಡುತ್ತಾ, ಮೇಲಿನ ತಟ್ಟೆಯ ಕೆಳಗಿರುವ ಕೊಳಕು, ಕೆಳಗಿನ ತಟ್ಟೆಯ ದೋಸೆಗೆ ತಾಗುವ ಸಾಧ್ಯತೆಯನ್ನು ಜಾಣವಾಗಿ ಮರೆಯುತ್ತಾ, ದೋಸೆಯನ್ನು ಭಲೇ ಭಲೇ ಎಂದು ತಾನೂ ಆಸ್ವಾದಿಸಿ, ‘ನಿಜವಾದ’ ‘ಹಳೆಯ ‘ ಬೆಂಗಳೂರನ್ನು ಪರಿಚಯಿಸಲೆಂದು ಕರೆತಂದಿರುವ ಜೊತೆಗಾರರನ್ನೂ ತಾವು ತಿನ್ನುತ್ತಿರುವ ದೋಸೆ ಅಧ್ಭುತವಾಗಿರುವಂಥದ್ದೆದು ನಂಬಿಸುತ್ತಾ, ವಿದ್ಯಾರ್ಥಿಭವನಕ್ಕೆ ಬಂದಿರುವ ನಗರ ಪರಿಣಿತನಂತದ್ದೇ ಪ್ರಯತ್ನ ಈ ಚಿತ್ರದ ನಿರ್ದೇಶಕರದ್ದು.
ಬರಿಯ ಚಂದ್ರಹಾಸನನ್ನು, ಚಿತ್ರ ತಯಾರಿಸಲು ಸಿದ್ಧಪಡಿಸಿಟ್ಟ ನಕ್ಷೆಯಲ್ಲಿ ತುರುಕಿಸಿ, ಕಳಪೆ ಗುಣಮಟ್ಟದ vfxಗಳನ್ನು ಹಾಗೂ ಅಬ್ಬರ ಕಿರಿಚಾಟಗಳನ್ನು ಪ್ರಯತ್ನಪೂರ್ವಕವಾಗಿ ತುಂಬಿಸಿ ‘ವೀರ’ ಚಂದ್ರಹಾಸನನ್ನಾಗಿ ಮಾಡಲಾಗಿದೆ. ಹೊಸ ಪ್ರಯತ್ನವೆಂದು ಬಿಂಬಿಸಲಾಗಿದೆ. ಕರಾವಳಿಯ ಯಕ್ಷಗಾನದ ವೈಭವದ ರೂಪ ಇದೆಂದು ನಂಬಿಸಲಾಗಿದೆ.
ದೋಸೆಯ ನಿಜವಾದ ರುಚಿಯನ್ನು, ತಿನ್ನಲು ಪಟ್ಟ ಸಾಹಸವನ್ನು ಅಳೆದು ತೂಗುವ, ವೀರ ಚಂದ್ರಹಾಸ ಚಿತ್ರದಲ್ಲಿ ತೋರಿರುವ ಯಕ್ಷಗಾನದ ಅಧಿಕೃತೆಯನ್ನು, ಕಲೆಗೆ ಒದಗಿಸಿರುವ ನ್ಯಾಯವನ್ನು ನಿರ್ಧರಿಸುವ, ನಂಬುವ ಹೊಣೆ ತಿನ್ನುಗನದ್ದು, ಪ್ರೇಕ್ಷಕನದ್ದು.
